ಸರಿಯಾದ ದಾರಿ, ಸತ್ಯ ಮತ್ತು ಸರಿಯಾದ ಜೀವನ
ಝೆನ್ ಧರ್ಮಗುರುವೊಬ್ಬ ತನ್ನ ಶಿಷ್ಯಂದಿರಿಗೆ ಧರ್ಮವನ್ನು ಬೊಧಿಸುತ್ತಾ ಹೇಳಿದ ನೀವು ನಿಮ್ಮ ನಿಜವಾದ ಸ್ವರೂಪ(ಆತ್ಮ)ವನ್ನು ಅರಿತರೆ ನಂತರ ನೀವು ಸರಿಯದ ದಾರಿ, ಸತ್ಯ ಮತ್ತು ಸರಿಯಾದ ಜೀವನವನ್ನು ಹೊಂದುವಿರಿ.
ಹಾಗಾದರೆ ಸರಿಯಾದ ದಾರಿ ಯಾವುದು? ಎಂದು ಶಿಷ್ಯನೊಬ್ಬ ಗುರುವನ್ನು ಪ್ರಶ್ನಿಸಿದ.
ಆದಕ್ಕೆ ಗುರು, ನೀನು ದಿನಾ ಯಾಕೆ ಊಟ ಮಾಡುತ್ತೀಯಾ, ಬರೀ ನಿನ್ನ ದೇಹಕ್ಕಾಗಿ, ನಿನ್ನ ಆಸೆ ತೀರಿಸಿಕೊಳ್ಳುವುದಕ್ಕಾಗಿ ಅಥವಾ ನಿನಗಾಗಿ? ಹಾಗಾದರೆ ನೀನು ಮೃಗಗಳಂತೆ ಎಂದಾಯಿತು. ಹಾಗಲ್ಲದೆ ನೀನು ತಿನ್ನುವುದು ಇತರ ಎಲ್ಲಾ ಜೀವಿಗಳಿಗಾಗಿ ಎಂದಾದರೆ ಆವಾಗ ನಿನ್ನ ಜೀವನ ಹಾಗೂ ದಾರಿ ಎರಡೂ ಸ್ಪಷ್ಟವಾಗುತ್ತದೆ. ಇದನ್ನೆ ಸರಿಯಾದ ದಾರಿ ಎನ್ನುತ್ತಾರೆ.
ಹಾಗಾದರೆ ಸತ್ಯ ಎಂದರೇನು? ಶಿಷ್ಯ ಮತ್ತೆ ಪ್ರಶ್ನಿಸಿದ
ಅದಕ್ಕೆ ಗುರು, ನಿನಗೆ ಸರಿಯಾದ ದಾರಿ ಗೊಚರಿಸಿದ ಮೇಲೆ, ನಿನ್ನ ಮನಸ್ಸಿಗೆ ಎಲ್ಲವೂ ಸ್ಪಷ್ಟ ಹಾಗು ಆಕಾಶದಂತೆ ಶುಭ್ರವಾಗಿ ಗೊಚರಿಸುತ್ತವೆ. ಇಲ್ಲಿಂದ ಮುಂದೆ ನೀನು ಕೇಳುವ ಪ್ರತಿಯೊಂದು ಮಾತು ಹಾಗು ನೊಡುವ ಪ್ರತಿಯೊಂದು ದೃಶ್ಯ ಎಲ್ಲವೂ ಸತ್ಯ.
ಹಾಗದರೆ ಸರಿಯಾದ ಜೀವನ ಯಾವುದು? ಶಿಷ್ಯನ ಮತ್ತೊಂದು ಪ್ರಶ್ನೆ
ಅದಕ್ಕೆ ಗುರುವಿನ ಉತ್ತರ, ನಿನಗೆ ಸತ್ಯದ ಆವಿಷ್ಕಾರವಾದಮೇಲೆ ನೀನು ಕ್ಷಣದಿಂದ ಕ್ಷಣಕ್ಕೆ ಸರಿಯಾದ ಕಾರ್ಯವನ್ನು ಸರಿಯಾದವರ ಜೊತೆ ಸರಿಯಾದ ಸಮಯದಲ್ಲಿ ಮಾಡುತ್ತಾ ಬಾಳುವುದೇ ಸರಿಯಾದ ಜೀವನ. ಇದನ್ನು ಅನೇಕರು ಅನೇಕ ಹೆಸರಿನಿಂದ ಪ್ರೀತಿ, ಅನುಕಂಪ, ದಯೆ, ಕರುಣೆ ಹಾಗು ಬೊಧಿಸತ್ವನ ದಾರಿ ಎಂದು ಕರೆಯುತ್ತಾರೆ. ಇದೇ ಸರಿಯಾದ ದಾರಿ.
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು —ಕೆ ಎಸ್ ಎನ್







